ಪ್ರತಿಯೊಬ್ಬ ಮನುಷ್ಯನಲ್ಲೂ ಒಬ್ಬ ಸೇವಾ ಮನೋಭಾವದ ಪರೋಪಕಾರಿ ಇರುತ್ತಾನೆ ಅನ್ನೋದು ನಮ್ಮ ದೃಢವಾದ ನಂಬಿಕೆ, ಆ ಮನುಷ್ಯ ಒಬ್ಬ ಅರ್ಹ ವ್ಯಕ್ತಿಗಾಗಿ, ಒಂದು ಒಳ್ಳೆಯ ಉದ್ದೇಶಕ್ಕಾಗಿ ಕೈ ಜೋಡಿಸಲು ಕಾಯುತ್ತಿರುತ್ತಾನೆ.
ಆಹಾರ, ಆರೋಗ್ಯ, ಅಕ್ಷರ ಈ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಆಪತ್ಕಾಲದಲ್ಲಿ ಮಾಸಿಕ / ತುರ್ತುಸ್ಥಿತಿ ಯಲ್ಲಿ ಮಾನವೀಯ ಸಹಾಯ ಹಸ್ತದ ನೆರವು ನೀಡಲು ಪರಸ್ಪರ ಪರಿವಾರ ಸದಾ ಮುಂಚೂಣಿಯ ಸಹೃದಯರು.
'ಸೇವಾಹಿ ಪರಮೋ ಧರ್ಮಃ' ಎಂದು ಹೇಳುವ ಮಾತು ಸೇವೆಯೇ ಧರ್ಮಗಳಲ್ಲಿ ಶ್ರೇಷ್ಠ ಎಂದು ಸಾರುತ್ತದೆ. ಅಗತ್ಯವುಳ್ಳವರಿಗೆ ಸಕಾಲದಲ್ಲಿ ಮಾಡುವ ಉಪಕಾರವೇ ಶ್ರೇಷ್ಠ ಸೇವೆ ಎನಿಸುತ್ತದೆ. ಸೇವೆ ಮಾಡುವ ಸಾಮರ್ಥ್ಯವನ್ನು ನಮಗೆ ದೇವರು ನೀಡಿದ್ದಾರೆಂದ ಮೇಲೆ ಸೇವೆ ಮಾಡುವುದು ನಮ್ಮ ಕರ್ತವ್ಯ. ನಮ್ಮ ಬದುಕಿನ ಸಾರ್ಥಕ್ಯಕ್ಕೆ ಸೇವೆ ಕಾರಣವಾಗುತ್ತದೆ.
ಈ ಪ್ರಪಂಚದಲ್ಲಿ ಉಳ್ಳವರು ಒಂದಷ್ಟು ಮಂದಿಯಾದರೆ ಇಲ್ಲದವರು ಬಹಳಷ್ಟು ಮಂದಿ. ಇನ್ನೂ ಅನೇಕ ಜನ ಒಂದು ಕಾಲದಲ್ಲಿ ಉಳ್ಳವರಾದರೆ ಇನ್ನೊಂದು ಕಾಲದಲ್ಲಿ ಇಲ್ಲದವರು, ಒಂದು ಕಾಲದಲ್ಲಿ ಏನೂ ಇಲ್ಲದವರು ಮತ್ತೊಮ್ಮೆ ಎಲ್ಲವನ್ನು ಪಡೆದವರು.
ಭಾಗ್ಯಗಳು ಯಾವತ್ತೂ ಒಂದೇ ರೀತಿ ಇರುವುದಿಲ್ಲ. ತಿರುಗುವ ಚಕ್ರದ ಪರಿಧಿಯಂತೆ ಏಳು ಬೀಳುಗಳು ಸಹಜ. ಉಳ್ಳವರು ಇಲ್ಲದವರಿಗೆ ಆಸರೆ ಆಗಬೇಕಾದುದು ಮಾನವೀಯ ಧರ್ಮ. ಇದಕ್ಕೆ ಸೇವೆ ಎನ್ನುವುದು.
ಬಾನಿನಿಂದ ಇಳೆಗೆ ಬಿದ್ದ ನೀರು ಎತ್ತರದ ಕಡೆಗೆ ಹರಿಯುವುದಿಲ್ಲ. ಹೊಂಡಗಳಿಗೆ ಹರಿದು ಅದನ್ನು ತುಂಬಿ ಸಮಾನತೆಯನ್ನು ಸಾಧಿಸುತ್ತದೆ. ಅವಶ್ಯಕತೆ ಇರುವವರಿಗೆ ಸಕಾಲದಲ್ಲಿ ಸ್ಪಂದಿಸಿ ಉಪಕರಿಸುವುದು ಸೇವೆ. ಮಳೆ ಬೀಳುವ ಮೋಡಕ್ಕೆ, ‘ತಾನು ತಗ್ಗಿಗೆ ಹರಿದು ಅದನ್ನು ತುಂಬಿಸಿದೆ. ಆದ್ದರಿಂದ ತಾನು ದೊಡ್ಡ ದಾನಿ’ ಎಂಬ ಹಮ್ಮು ಇಲ್ಲ. ಅದರ ಸ್ವಭಾವವೇ ಅದು. ಮೇಲ್ಮುಖವಾಗಿ ಚಾಚಿದ ಕೈಗೆ ಕೆಳಮುಖವಾದ ಹಸ್ತಗಳಿಂದ ಕೊಡುವಾಗಲೂ ದಾನಿಗೆ ಅಹಂ ಇರಬಾರದು. ವಿಧಿ ಅವನಿಗೆ ಇತರರಿಗೆ ಸಾಧ್ಯವಾಗುವ ರೀತಿಯಲ್ಲಿ ದಾನ ಕೊಡುವ ಯೋಗ್ಯತೆ ನೀಡಿದೆ. ಆಗ ಅಗತ್ಯ ಇರುವವರಿಗೆ ಕೊಡುವ ಗುಣ ಸ್ವಭಾವ ಸಹಜವಾಗಿರಬೇಕು. ನಾಳೆ ಇವನಿಗೂ ಅಂತಹದೇ ಪರಿಸ್ಥಿತಿ ಬರಬಾರದೇಂದೇನೂ ಇಲ್ಲ. ಪಡೆಯುವವನಿಗೂ ಕೊಡುವವನಿಗೂ ಇಬ್ಬರಿಗೂ ವಿನಮ್ರ ಭಾವವಿದ್ದರೆ ವ್ಯಕ್ತಿತ್ವಕ್ಕೆ ಹೆಚ್ಚು ಶೋಭೆಯನ್ನು ಕೊಡಬಲ್ಲುದು. ವ್ಯಕ್ತಿಯ ಬಳಿ ಇರುವ ಅಂತಸ್ತು, ಶ್ರೀಮಂತಿಕೆ ಯಾವುದೂ ಅವನ ವ್ಯಕ್ತಿತ್ವಕ್ಕೆ ಗೌರವ ನೀಡದು. ಬದಲಾಗಿ ಅವನದನ್ನು ಯಾವ ರೀತಿಯಲ್ಲಿ ಸತ್ಪಾತ್ರರಿಗೆ ದಾನ ನೀಡುತ್ತಾನೋ ಅಥವಾ ಅಗತ್ಯ ಇರುವವರಿಗೆ ನೆರವು ನೀಡಿದಾಗಲೇ ಅದರ ಮೌಲ್ಯ ಹೆಚ್ಚುವುದು.
*ಪರಸ್ಪರ* ಗುಂಪಿನ ಸದಸ್ಯರಿಂದ *ವಾತ್ಸಲ್ಯ ಸೇವಾ ಫೌಂಡೇಶನ್* ಸಂಸ್ಥೆಗೆ ಸಂಗ್ರಹಿಸಿದ ದೇಣಿಗೆ ಮೊತ್ತ..
.